2024-25 ನೇ ಸಾಲಿನ ಮಿರ್ಜಾನ ವಲಯ ಮಟ್ಟದ ಪ್ರತಿಭಾ ಕಾರಂಜಿ

ದಿನಾಂಕ 19/09/2024 ರಂದು 2024-25 ನೇ ಸಾಲಿನ ಮಿರ್ಜಾನ ವಲಯ ಮಟ್ಟದ ಪ್ರತಿಭಾ ಕಾರಂಜಿಯು ಜರುಗಿತು. ಕಾರ್ಯಕ್ರಮದ ಉದ್ಘಾಟಕರಾಗಿ ವಿದ್ಯಾನಿಕೇತನ ಮುರೂರು ಕಲ್ಲಬ್ಬೆ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ವಿ ಎಸ್ ಹೆಗಡೆಯವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿರುವ ಸಾಮರ್ಥ್ಯಗಳು ವಿಭಿನ್ನವಾಗಿರುತ್ತವೆ, ಶಿಕ್ಷಕರಾದವರು ಮಗುವಿನಲ್ಲಿರುವ ಸಾಮರ್ಥ್ಯವನ್ನು ಅರಿತು ಸೂಕ್ತ ತರಬೇತಿ ನೀಡಿದಾಗ ಆ ಮಗುವಿನಲ್ಲಿರುವ ಸುಪ್ತವಾದ ಪ್ರತಿಭೆ ಅರಳಲು ಸಾಧ್ಯವಾಗುತ್ತದೆ. ಅಂತಹ ಅವಕಾಶವನ್ನು ಹೆಚ್ಚೆಚ್ಚು ಕಲ್ಪಿಸಬೇಕು. ವಿದ್ಯಾರ್ಥಿಗಳು ಸಹ ಇಂತಹ ವೇದಿಕೆಯ ಪ್ರಯೋಜನ ಪಡೆದುಕೊಳ್ಳಬೇಕು.ಆದರೆ ಇಲ್ಲಿ ಸ್ಪರ್ಧೆ ಮುಖ್ಯವಾಗಿರುವುದರಿಂದ ಸಹಜವಾಗಿಯೇ ಮಗು ಉತ್ತಮ ಪ್ರದರ್ಶನ ನೀಡಲೇಬೇಕು. ಪ್ರತಿಭಾವಂತ ಮಗು ಸಹಜವಾಗಿಯೇ ಗೆಲುವನ್ನು ಪಡೆಯುತ್ತದೆ. ಆದರೆ ಗೆಲುವು ದೊರಕದೇ ಇರುವ ಮಗು ನಿರಾಸೆ ಹೊಂದದೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಪ್ರಯತ್ನದಿಂದ ಸಾಧನೆಗೈದು ನಾಡಿಗೆ ಕೀರ್ತಿ ತರಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕರಾದ ಶ್ರೀಮತಿ ಜಯಶ್ರೀ ಎ.ಪಿ ಅವರು, ವ್ಯವಸ್ಥಿತವಾಗಿ ಸಂಘಟನೆಗೊಂಡ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ವಿದ್ಯಾನಿಕೇತನ ಮುರೂರು ಕಲ್ಲಬ್ಬೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಟಿ ಎಸ್ ಭಟ್ಟರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರೇರಣಾದಾಯಕ ನುಡಿಯಾಡಿದರು. ವಿದ್ಯಾನಿಕೇತನ ಸಂಸ್ಥೆಯ ಶಿಕ್ಷಣ ಸಮಿತಿಯ ಸಂಚಾಲಕರಾದ ಶ್ರೀ ಟಿ .ಆರ್. ಜೋಶಿ, ಮುಖ್ಯಾಧ್ಯಾಪಕರುಗಳಾದ ವಿವೇಕ ಆಚಾರಿ, ವಿ. ಎಸ್. ಗೌಡ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ತಾಲೂಕಿನ ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

You may also like...